Monday 10 October 2011

ಚಕ್ಕಡಿ ಗಾಡಿ ಮತ್ತು ಬಡ ಭಿಕ್ಷುಕಿ..!


ದಚ್ಚು ಕಥೆಯ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ http://dacchudoddamani.blogspot.com/2011/09/blog-post.html
ದಚ್ಚು ಕಥೆಯ ಎರಡನೇ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ http://dacchudoddamani.blogspot.com/2011/09/1.html



ಧೈವ ಭಕ್ತನಾಗಿದ್ದ ಸತ್ಯ ಸಂಗನಿಗೆ ಹೊರೆಯಾಗಬಾರದೆಂದು ಭಾವಿಸಿ ಎಲ್ಲಾದರು ಕೆಲಸಕ್ಕೆ ಸೇರಿಕೊಂಡು ಬಂದ ಆದಾಯದಲ್ಲಿ ಸಂಗನ ಜೊತೆ ಜೀವನ ನಡೆಸೋಣ ಎಂದೂ ಕೊಂಡಿದ್ದ ಆದರೆ  ಅಂದುಕೊಂಡ ಹಾಗೆ ಜೀವನ ನಡೆಯೋದಿಲ್ಲವಲ್ಲಾ ತಾ ಒಂದು ಬಗೆದರೆ ಧೈವ ಮತ್ತೊಂದು ಬಗೆಯುತ್ತೆ ಅನ್ನೋದು ಸತ್ಯನ ಬಾಳಲ್ಲಿ ನಿಜವೆನಿಸಿತು, ಸಂಗನ ಜೊತೆ ದೋಣಿ ನಡೆಸಲು ಕೆಲವು ಬಾರಿ ಹೋದರು ತುಂಬಿ ಹರಿಯುವ ತುಂಗಭದ್ರೆಯನ್ನ ನೋಡಿದರೆ ಅವನಿಗೆ ಎಲ್ಲಿಲ್ಲದ ಆಕ್ರೋಶ, ಸಿಟ್ಟು, ಎಷ್ಟೋ ಬಾರಿ ಭಯಗೊಂಡು ಬಿಕ್ಕಿಬಿಕ್ಕಿ ಅತ್ತದ್ದು ಉಂಟು, ಇದನೆಲ್ಲಾ ಗಮನಿಸುತ್ತಿದ್ದ ಸಂಗಾ ಒಮ್ಮೆ ಸತ್ಯನನ್ನು ಕರೆದು "ಲೋ ಮಗ ನಿಂಗ್ಯಕ್ಲಾ  ಈ ಕಷ್ಟ ನಿಂದಿನ್ನು ಚಿಕ್ಕ ವಯಸ್ಸು ಮನೆಕಡೆ ಆಡ್ಕೊಂಡು ಇರು ಯಾವ್ದಕ್ಕೂ ಚಿಂತೆ ಮಾಡಬೇಡ ನಾ ನಿನ್ನ ಸಾಕ್ತೀನಿ ಹೋಗ್ ಮನಿಹತ್ರ ಹುಡುಗ್ರು ಜೋಡಿ ಆಡು ಹೋಗು" ಎಂದೂ ಬುದ್ಧಿವಾದ ಹೇಳಿ ಸಮಾಧಾನ ಮಾಡುತ್ತಿದ್ದ  ಆದರೆ ಒಂಟಿತನ ಮಾತ್ರ ಅವನನ್ನು ಬಿಡಲಿಲ್ಲ ಮಕ್ಕಳ ಜೊತೆ ಬೆರೆತು ಆಡುವ ವಯಸ್ಸಿನಲ್ಲಿ ತಂದೆ ತಾಯಿಯ ಅಗಲಿಕೆಯ ದುಃಖ ಅವನ ಮನಸ್ಸಲ್ಲಿ ಹೆಮ್ಮರವಾಗಿ ಬೆಳೆಯುತ್ತ ಬಂತು ತನ್ನವರಿಲ್ಲದ ತನ್ನವರಲ್ಲದ ಅಪರಿಚಿತ ಊರಿನಲ್ಲಿ ಪರಿಚಿತನಾಗಿ ಹೊಂದಿಕೊಳ್ಳುವುದು ಯಾರಿಗಾದರು ಹೊಸತರಲ್ಲಿ ಕಷ್ಟಸಾದ್ಯ ಅದು ಆ ಚಿಕ್ಕ ವಯಸ್ಸಿನಲ್ಲಿ ....


ತನ್ನಷ್ಟೇ ವಯಸ್ಸಿನ ಹುಡುಗರೊಂದಿಗೆ ಬೆರೆತು ಆಡೋಣವೆಂದರೆ ಅಲ್ಲಿಯೂ ಕೂಡ ಇವನ ಬಗ್ಗೆ ಕಟುವಾದ ಟೀಕೆಗಳು ಹುಟ್ಟುತ್ತಿದ್ದವು ಕೆಲವು ಮಕ್ಕಳಂತೂ ಇವನನ್ನು ಸೇರುತ್ತಿರಲಿಲ್ಲ ಆ ಚಿಕ್ಕ ಚಿಕ್ಕ ಮಕ್ಕಳ ಬಾಯಲ್ಲಿ "ಲೇ ಅವ ಅಪ್ಪ ಅಮ್ಮನ ನುಂಗಿದವ ಅವನ್ ಕೂಡ ಆಡೋದ್ ಬೇಡ್ರೋ" ಅನ್ನೋ ಹಲವು ದೊಡ್ಡ ದೊಡ್ಡ ಮಾತುಗಳು ಕಿವಿಗೆ ಪ್ರತಿನಿತ್ಯ ತಾನು ಪಠಿಸುವ ಶ್ಲೋಕಗಳಂತೆ ಸತ್ಯನನ್ನು ಆವರಿಸಿದ್ದವು...

ಹೀಗೆ ಸುಮಾರು ದಿನಗಳ ನಂತರ ದೇವಸ್ತಾನದ ಬಳಿ ಭಿಕ್ಷೆ ಬೇಡುತ್ತಿದ್ದ ಹಣ್ಣಣ್ಣು ಮುದುಕಿ ಒಬ್ಬಳು ಅಚಾನಕ್ ಆಗಿ ಮಟಮಟ ಮಧ್ಯಾನ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ಜಾರಿ ಬಿದ್ದಾ ಕಲ್ಲಿನ ಏಟುಗಳಿಗೆ ಆ ಮುದುಕಿ  ಬಿದ್ದಲ್ಲಿಯೇ ಪ್ರಾಣ ಬಿಟ್ಟಳು, ದೇವರ ದರ್ಶನಕ್ಕಾಗಿ ಬಂದಿದ್ದವರೆಲ್ಲ ಮೂಖ ಪ್ರೇಕ್ಷಕರಂತೆ ಸುಮ್ಮನೆ ನೋಡುತ್ತಾ ನಿಂತಿದ್ದರೆ ವಿನಃ ಅವರಲ್ಲಿ ಯಾರೊಬ್ಬರು ಆಕೆಯನ್ನ ಪೋಷಿಸಲು ಮುಂದಾಗಲಿಲ್ಲ, ಮಡಿ ಮೈಲಿಗೆ, ಮೇಲು ಕೀಳು, ಜಾತಿ ಧರ್ಮ ಇವುಗಳ ಸುಳಿಯಲ್ಲಿ ಬದುಕು ನಡೆಸುತ್ತಿದ್ದ ಅಲ್ಲಿನ ಶ್ರೀಮಂತ ಭಿಕ್ಷುಕರಿಗೆ ಆ ಮುದುಕಿಯ ಕೊನೆಯ ಉಸಿರಿನ ಸದ್ದು ಹೇಗೆ ತಾನೇ ಕೇಳಿಬರಬೇಕು..? ಹೇಳಿ ಕೇಳಿ ಮೊದಲೇ ದೇವಸ್ಥಾನದ ಬಡ ಭಿಕ್ಷುಕಿ...! ದೇವಸ್ತನಕ್ಕೆಂದು ಬರುತ್ತಿದ್ದ ಕೆಲವರಂತೂ ಈ ವಿಷಯ ತಿಳಿದ ತಕ್ಷಣ ಅಲ್ಲಿಂದಲೇ ವಾಪಸ್ ಮನೆಗೆ ಹೋಗುತ್ತಿದ್ದರು ಗರ್ಭ ಗುಡಿಯಲ್ಲಿ ಪೂಜೆ ಮಾಡುವ ಪೂಜಾರಿ ಪ್ರಪಂಚವೇ ತನ್ನೊಬ್ಬನ ತಲೆ ಮೇಲೆ ಬಿದ್ದ ರೀತಿಯಲ್ಲಿ ಮಂತ್ರ ಹೇಳುತ್ತಾ "ಹಾಳಾದ್ ಮುದುಕಿ ಸಾಯೋಕೆ ಬೇರೆ ಜಾಗವೇ ಸಿಗ್ಲಿಲ್ಲ ಅನಿಸುತ್ತೆ ಬಂದು ಇಲ್ಲೆ ಸಾಯ್ಬೇಕಿತ್ತ... ಅಪಶಕುನ.. ಅಪಶಕುನ.." ಅನ್ನುತ್ತಲೇ ದೇವರಿಗೆ ಹೊಗಳನ್ನ ಏರಿಸುತ್ತಿದ್ದ, ಇನ್ನೂ ಬೆಳಗ್ಗೆಯಿಂದ ಸಂಜೆಯ ತನಕ ಕೆಲಸವಿಲ್ಲದೇ ಹಾಳು ಹರಟೆ ಹೊಡೆಯುತ್ತ ಕೂತಿದ್ದ ಐದಾರು ಊರಿನ ಹಿರಿಯ ತಲೆಗಳು ಭಿಕ್ಷುಕಿಯ ಸ್ಥಿತಿ ಅರಿತು ಜೀವ ಹೋಗಿರುವುದನ್ನು ದೂರದಿಂದಲೇ ಖಚಿತಪಡಿಸಿಕೊಂಡು ಹೆಣ ಸಾಗಿಸಲು ಕೆಳಹಟ್ಟಿಗೆ ನಾಲ್ಕೈದು ಜರನನ್ನು ಕರೆತರಲು ಒಬ್ಬನನ್ನು ಕಳುಹಿಸಿದರು ಎಷ್ಟು ಹೊತ್ತಾದರೂ ಹೊಲೆಯರು ಬರಲಿಲ್ಲ ಅವರಲ್ಲಿ ಈಗೀಗ ಒಗ್ಗಟ್ಟು ಜಾಸ್ತಿಯಿತ್ತು ಅಲ್ಲದೆ ತಮ್ಮದೇ ಆದ ಒಂದು ಸಂಘವು ಇತ್ತು ,




ಮೇಲ್ಹಟ್ಟಿಯವರಿಂದ ಯಾವಾಗಲು ಶೋಷಣೆಗೆ ಒಳಗಾಗುತ್ತಿದ್ದ ಆ ಜನರಲ್ಲಿ ನಾವು ಕೀಳಲ್ಲ ಅಂತ ತೋರಿಸಿಕೊಳ್ಳುವುದೇ ಅವರ ಸಂಘದ ಮುಖ್ಯ ಉದ್ದೇಶವಾಗಿತ್ತು, ಆ ಸಂಘದ ಮುಖಂಡ ಕೆಂಚಾನ ಮಾತನ್ನು ಅಲ್ಲಿ ಯಾರು ಮೀರುತ್ತಿರಲಿಲ್ಲ, ದೇವಸ್ತಾನದಲ್ಲಿ ಜೀವ ಬಿಟ್ಟ ಭಿಕ್ಷುಕಿಯ ಶವ ಸಂಸ್ಕಾರ ಮಾಡಲು ಮೇಲ್ಹಟ್ಟಿಯಿಂದ ನಮ್ಮನ್ನ ಕರೆಯಲು ಯಾರಾದರು ಬಂದೆ ಬರ್ತಾರೆ ಅನ್ನುವುದು ಮೊದಲೇ ಗೊತ್ತಿದ್ದ ಕೆಂಚಾ ಕೆಲವು ಮಂದಿಯನ್ನು ತನ್ನ ಬಿಡಾರಕ್ಕೆ ಗೌಪ್ಯವಾಗಿ ಕರೆದು "ನೋಡ್ರಿ ಇದಾ ಒಳ್ಳೆ ಸಮಯ ನಾವು ಕೀಳು ಅಲ್ಲಾ ಅಂತ ಸಾಬಿತ್ ಪಡಿಸೋಕ , ಒಂದು ಮಾತ್ ಹೇಳ್ತೀನಿ ಕೇಳಿ ಯಾವನೇ ಬಂದು ಏನ್ ಒದರಿದ್ರು ನಾವ್ಯಾರು ಆ ಭಿಕ್ಷುಕಿ ಶವನ ಸಂಸ್ಕಾರ ಮಾಡೋದಲ್ಲ ಬರೀ ಮುಟ್ಹಾಕ್ ಸಹಿತಾ ಹೋಗೋದು ಬ್ಯಾಡ, ಈಟು ವರ್ಷ್ಯ ನಮ್ಮನ್ ಆ ಮೇಲ್ಹಟ್ಟಿ ಅವರು ಆಳಿದ್ದು ಸಾಕು ಇನ್ ಮುಂದ  ನಾವು ಏನ್ ಅಂತ ತೋರಿಸೋನ ಇನ್ಮುಂದಾ ನಾವ್ ಏನಂತ ಅವರಿಗೆ ಗೊತ್ತಾಕೈತಿ" ಅನ್ನೋ ಸೂಚನೆ ಕೊಟ್ಟಿದ್ದ ಅದಕ್ಕೆ ಹೌದು ಅನ್ನುವಂತೆ ಎಲ್ಲರೂ ತಲೆ ಆಡಿಸಿದ್ದರು, ಮೇಲ್ಹಟ್ಟಿಯಿಂದ ಮೂರುನಾಲ್ಕು ಬಾರಿ ಯಾರೋ ಒಬ್ಬ ಬಂದು ಕರೆದು ಹೋಗಿದ್ದ ಅವನ ಮಾತಿ ಕೆಳದವರಹಾಗೆ  ಊರಿನ ಕಡೆ ಯಾರು ತಲೆಹಾಕದೆ ತಮ್ಮ ತಮ್ಮ ಬಿಡಾರಗಳಲ್ಲೇ ಅಂದಿನ ದಿನದ ಸಮಯ ಕಳೆಯಲು ನಿರ್ಧರಿಸಿದ್ದರು. 


ಸಮಯ ಮೀರುತ್ತಿತ್ತು ಗರ್ಭಗುಡಿಯ ಮೇಲೆ ಹದ್ದುಗಳ ಹಾರಾಟ ಆಗಲೇ ಶುರುವಾಗಿತ್ತು, ಅಲ್ಲಿದ್ದವರಲ್ಲಿ ಒಬ್ಬ ನುಡಿದ "ಗರ್ಭಗುಡಿಮ್ಯಾಗ ಹದ್ದು ಹಾರ್ತ ಇದಾವು ಊರಿಗೆ ಏನ್ ಕಾದೈತೋ ಏನೋ...ನಮ್ ಗೌಡ ಇವತ್ತು ಊರಾಗ ಇದ್ದಿದ್ರ, ಆ ಕೆಳಹಟ್ಟಿಯವರಿಗೆ ಮಾರಿ ಹಬ್ಬ ಮಾಡ್ತಿದ್ದ ಇಷ್ಟೊತ್ತಾದ್ರು ಯಾವ ಹೊಲಿಯನು ಬಂದಿಲ್ಲ ಆ ಮಾದರಹಟ್ಟಿಗರ ಹೇಳಿ ಕಳಿಸ್ರೋ ಯಾವನಾದ್ರು ಬರ್ತನೇನೋ ನೋಡುಣ ",  "ಅಯ್ಯೋ ಎಲ್ಲಿದಿಯೋ ಮಾರಾಯ ಕೆಳಹಟ್ಟಿಯವರಾ ಬಂದಿಲ್ಲ ಇನ್ನೂ ಆ ಮಾದ್ರಹಟ್ಟಿಯವರೆಲ್ಲಿಂದ ಬರ್ತಾರಾ..? ಇನ್ನೊಂದು ಸ್ವಲ್ಪಹೊತ್ತು ನೋಡಿ ಮನಿಕಡೆ ಹೋಗೋಣ ನಮ್ಗ್ಯಾಕ್ ಬೇಕು ಇದೆಲ್ಲ " ಮತ್ತೊಬ್ಬ ಹೇಳಿದ 

ಎಷ್ಟು ಹೊತ್ತು ಕಾದರು ಯಾರು ಬರುವ ಸೂಚನೆ ಕಾಣಲಿಲ್ಲ, ಸೂರ್ಯ ಹಸ್ತಂಗತನಾಗುತ್ತಿದ್ದಾನೆ, ಹದ್ದುಗಳ ಹಾರಾಟದ ಸಂಖ್ಯೆ ಹೆಚ್ಚುತ್ತಿದೆ,  ಸತ್ತ ಮುದುಕಿಯ ಮೇಲೆ ಅಲ್ಲಲ್ಲಿ ಇರುವೆಗಳು ಹರಿದಾಟುತ್ತಿವೆ, ದೂರದ ಪೊದೆಗಳಲ್ಲಿ ನಾಲ್ಕೈದು ನಾಯಿಗಳು ಮುದುಕಿಯನ್ನು ಕಿತ್ತು ತಿನ್ನುವ ಅವಕಾಶ ಸಿಗುವುದೇ ಎಂದು ಸಾವ್ಧಾನಲ್ಲಿ ಕಾದು ಕೂತಿವೆ, ದೇವಸ್ಥಾನದ ಜಗಲಿಯಲ್ಲಿ ಕುಳಿತ್ತಿದ್ದವರೆಲ್ಲ ಹೆಗಲಿಂದ ಟವಲ್ ತೆಗೆದು ಒಮ್ಮೆ ನೆಲಕ್ಕೆ ಕೊಡವಿ  ಮನೆಕಡೆ ಹೋಗಲು ಸಿದ್ದರಾಗಿದ್ದಾರೆ, ಪೂಜಾರಿ ಇಲ್ಲಿ ಏನು ನಡೆದಿಲ್ಲವೆಂಬಂತೆ ಗರ್ಭಗುಡಿಯನ್ನ ಮುಚ್ಚಿ ಮನೆಗೆ ಹೋಗಲು ಮುಖ್ಯದ್ವಾರಕ್ಕೆ ಬರುತ್ತಿದ್ದಾನೆ ಅಷ್ಟರಲ್ಲೇ ಅನೈತಿ ದೂರದಿಂದ ಏನೋ ಕರ್ಕಶ ಸದ್ದು ಕೇಳಿ ಬರುತ್ತಿದೆ ಅಲ್ಲಿ ಇದ್ದವರೆಲ್ಲ ಆ ಕಡೆ ಮೂಖ ಮಾಡಿ ಏನಿರಬಹುದೆಂದು ಚಕಿತರಾಗಿ ನೋಡುತ್ತಾ ನಿಂತಿದ್ದಾರೆ, ಎಲ್ಲರಿಗು ಒಮ್ಮೆ ಆಶ್ಚರ್ಯ ಎಲ್ಲರ ಕೈ ಬೆರಳುಗಳು ಬೆರಗಾಗಿ ಬಾಯಿ ತುದಿಗೆ ಬಂದಿವಿ ,  ಒಂದು ಕಡೆ ಗಾಲಿ ಇಲ್ಲದ ಒಂಟಿಗಾಲಿ ಚಕ್ಕಡಿಯನ್ನು ಸರ್ಕಾರಿ ಟಾರ್ ರಸ್ತೆಯ ಮೇಲೆ ಕೊರೆಯುತ್ತ ಕರ್ಕಶವಾಗಿ ಸದ್ದು ಮಾಡುತ್ತಾ ಯಾರೋ ಒಬ್ಬ ಎಳೆದುಕೊಂಡು ಬರುತ್ತಿದ್ದಾನೆ, ಸರಿಸುಮಾರು 15 ಕ್ಕೂ ಹೆಚ್ಚು  ವರ್ಷಗಳ ಹಿಂದೇ ದೇವಸ್ಥಾನದ ಉತ್ತರ ದಿಕ್ಕಿನಲ್ಲಿ ಪೊದೆಗಳ ನಡುವೆ ಯಾರ ಮಾಲಿಕತ್ವವಿಲ್ಲದೆ ಬಿದ್ದಿದ್ದ ಅದೇ ಹಳೆಯ ಚಕ್ಕಡಿ ನೋಡು ನೋಡುತ್ತಲೇ ಅದು ಸತ್ತು ಬಿದ್ದಿದ್ದ ಬಡ ಭಿಕ್ಷುಕಿಯ ಹತ್ತಿರ ಬಂದು ನಿಂತಿದೆ....! 

ಮುಂದಿನ ಸಂಚಿಕೆಯಲ್ಲಿ...........

ಮತ್ತ ಸಿಗೋಣ್ರಿ ಶರಣು ಶರಣು 
ಮರೀಚಿಕೆ 
+919742495837 


Thursday 15 September 2011

ದಚ್ಚು ಭಾಗ 1 ರ ಮುಂದುವರೆದ ಭಾಗ..!

ದಚ್ಚು ಕಥೆಯ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ http://dacchudoddamani.blogspot.com/2011/09/blog-post.html



ರಾಮಪ್ಪ ದೂರದಲ್ಲಿ ನಿಂತಿದ್ದ, ಹತ್ತಿರ ಹೋದಂತೆ ಸತ್ಯಪ್ಪ ಒಂದೇ ಸಮನೆ ಬಾಯಿಗೆ ಬಂದಂತೆ ಬೈಯಲು ಶುರು ಮಾಡಿದ "ಅಯ್ಯೋ ನೀನಾ..? ನಿನ್ನ ಮನೆಕಾಯೋಗ, ಹುಚ್ಚುಮುಂಡೆದೆ, ಮತಿಗೆಟ್ಟವ್ನೇ, ಥೂ ನಿನ್ನ ಮಖಕ್ಕೆ ಸ್ವಲ್ಪನಾದ್ರು ಭಯ ಅನ್ನೋದು ಇದ್ಯಾ ನಿನಗೆ..ನಿನಗೇನೋ ಬಂತು ಇಲ್ಲಿ  ಬಂದು ಮಲಗೋ ಅಂತದ್ದು ದೊಡ್ಡ ರೋಗ...ಊರ ಉಳಗೆ ಜಾಗ ಇರ್ಲಿಲ್ವ..? ಅಷ್ಟರಲ್ಲಿ ರಾಮಪ್ಪ ಹತ್ತಿರ ಬಂದು ನೋಡಿ ಮಲಗಿದ್ದವನನ್ನು ಗುರುತು  ಹಿಡಿದು " ಇವ್ನಾ... ಇವ್ನ ಬಾಯಾಗ ಮಣ್ಣು ಹಾಕ, ನಾನೆಲ್ಲೋ ಗುಂಡ್ಯಾಗಿನ ಹೆಣ ಹೊರಬಿದೈತಿ ಅಂತ ಅನ್ಕೊಂಡಿದ್ದೆ ಇವ್ನಾವ್ನು ಗುಣಿ ಪಕ್ಕ ಬಂದು ಮಲ್ಕಂಡವ್ನಾ ಇವ ಮನುಷ್ಯನ್ ಸಮ್ಮು ಇಲ್ಲಾ ಅಂತ ಕಾಣ್ತದ ಇವತ್ತು ಹೊತ್ತಾರೆ ಎದ್ದು ಯಾರ ಮಖ ನೋಡಿದ್ನೋ ಏನೋ ಒಳ್ಳೆ ಗ್ರಹಚಾರಕ್ಕೆ ಸಿಕ್ಕೊಂಡೇ ಮೊದ್ಲು ನಾ ನೀರ್ ಕಡೆ ಹೊಕ್ಕಾನಿ ಲೇ.. ಇವ್ನಿಗೆ ಸರಿಯಾಗಿ ಬುದ್ಧಿ ಕಲ್ಸು ಹಂಗಾ ಬಿಡಬೇಡ ನಾ ಊರಾಗ ಇವ್ನಿಗೆ ಮಾರಿ ಹಬ್ಬ ಮಾಡ್ತೀನಿ ನಾ ಈಗ ಹೊಂಟೆ ಮೊದ್ಲು ನೀರ್ಕಡೆ ಹೋಗ್ಬೇಕು"

"ಹೋಗಪ್ಪ ಶರಣ ನಿನ್ಯಾರು ಇಲ್ಲಿ ಹಿಡ್ಕೊಂಡಿಲ್ಲ ಅದೇನ್ ಮಾರಿ ಹಬ್ಬ ಮಾಡ್ತಿಯೋ ನಾನು ನೋಡ್ತೀನಿ" ಸತ್ಯ ಮತ್ತು ರಾಮಪ್ಪನ ಬಾಯಿಗೆ ಎಚ್ಚರವಾಗಿ ಮೈ ಮುರಿದು  ಎದ್ದಾ ದಚ್ಚು  ಕಣ್ಣು ಉಜ್ಜಿ ಆಕಳಿಸುತ್ತಾ  ಹೇಳಿದ 

ಹೋಗ್ಲಿ ಬಿಡ ಅವ ತಮಾಷಿ ಮಾಡ್ತನ ಅವನ್ ಕುಟ ಏನು ಲೇ...ರಾಮಪ್ಪ ನೀ ನೀರ್ಕಡೆ ಹೋಗಿ ಬರ್ತಾ ಹೋಟೆಲ್ ದಾಗ ಏನಾದ್ರು ದಚ್ಚುಗೆ ತಗೊಂಡು ಬಾ  ಹೋಗು ಸತ್ಯಪ್ಪನ ಮಾತಿಗೆ ರಾಮಪ್ಪ ಒಂದು ಮಾತನಾಡದೆ ಸಿಟ್ಟಿನಿಂದ ತಿರುಗಿ ನೋಡದೆ ಹೋದ  

ಅಲ್ಲೋ ನಾ ಕಾವಲು ಇದ್ರೂ  ಗೇಟ್ ಹಾಕಿದ್ರು ಹೆಂಗ ಒಳಾಗ್ ಬಂದ್ಯೋ..? ಈ ಸ್ಮಶಾಣದಾಗೆ ಬಂದು ಮಲಗಿದ್ರ ಮಂದಿ ನಿನ್ನ ಹುಚ್ಚಾ ಅಂತರಾ, ಇವತ್ತೇನೋ ಆ ಪುಕುಲು ರಾಮ ನೋಡ್ದಾ ಸರಿ ಹೋತು ಬೇರೆ ಯಾರಾರ ನೋಡಿ ಊರಾಗ ಹೇಳಿ ನಿನಗೆ ಗಾಳಿ ಸೋಕೆತಿ ಅಂತ ಊರಾಚೆ ಹಾಕಿದ್ರೆ ಏನ್ ಮಾಡ್ತಿಯೋ..? 

ನನ್ನವ್ವನ್ನ ನೆನಪಾದಗೆಲ್ಲ ನಾ ಇಲ್ಲೆ ಬಂದು ಮಲ್ಕೊಳ್ತಿನಿ ಸತ್ಯಣ್ಣ ಯಾರ್ ಏನ್ ಅಂದ್ರೇನು..? ಏನ್ ಮಾಡಿದ್ರೇನು...? 

ಲೇ  ದಡ್ಡಾ.. ಜೊತೆಗೆ ಇದ್ದೋಳು ಒಬ್ಳು ತಾಯಿ ಅವಳು ನಿನ್ನ ಬಿಟ್ಟು ಈ ಗುಣಿಯೋಳಗ ಮಂಕ್ಕಂಡಾಳ, ಈ ಉರಾಗಿನ್ ಜನ ಸರೀಲ್ಲೋ ತಮ್ಮಾ ನಾ ಹೇಳದನ್ನ ಕೇಳು, ನಾ ಹೆಣ ಕಾಯೋನಾ ಇರಬಹುದು ಇಲ್ಲಿ ಮಂದಿ ಹೇಗೆ ಅಂತ ನನಗ ಗೊತ್ತು, ನೀ ಸತ್ರು ಒಬ್ರು ನೋಡೋಲ್ಲಾ... 

ಸತ್ಯಣ್ಣ ನಮ್ಮವ್ವ ಸತ್ತಾಗ ಯಾರು ನೋಡಲಿಲ್ಲ ಇನ್ನೂ ನನ್ನ ನೋಡ್ತಾರ..? ನೋಡಲ್ಲ ಅನ್ನೋದು ನನಗೆ ಗೊತ್ತು , ಹಣೆಲಿ ಆ ಭಗವಂತ ಏನ್ ಬರ್ದವ್ನೋ ಅದಾ ಆಗೋದು. 

ಹಂಗಂತ ಸುಮ್ನಾ ಕುರ್ತಿಯಾ ? ಮುಂದಿನ ದಾರಿ ನೋಡೋ.. ಕಷ್ಟಾ ಪಟ್ಟು ನಿಮ್ಮವ್ವ ಇಲ್ಲಿ ತನಕ ಓದಿಸ್ಯಾಳ ನನ್ ಥರ ಅಕ್ಷರ ತಿಳಿಲಿಲ್ದಾವೆನಲ್ಲಾ.... ನಿಮ್ಮವ್ವ ಕಟ್ಟಿದ ಕನಸಗಳನ್ನ ನನಸ ಮಾಡೋಕ ಮನ್ಸು ಮಾಡು. ನಿಮ್ಮವನ್ನ ಮಣ್ಣಾಗ ಹಾಕಿ 5 ದಿನ ಆಯ್ತು ಯಾರಾದ್ರು ನಿನ್ನ ಹತ್ರ ಬಂದು ಒಪ್ಪತ್ತಿನ್ ಊಟ ಕೊಟ್ಟರೇನೋ...? ಕೊಡಲ್ಲ ಎಲ್ಲಾ ನೀಚ ಜನ, ಬರೀ ಧರ್ಮ ಜಾತಿ ಅಂತ ನಮ್ಮಂತವರ್ನಾ ಊರಿಂದ ಆಚೆ ಇಡ್ತಾರಾ ಈ ಊರಾಗಿನ್ ಜನ, ಎಲ್ಲಾ ಆ ಗೌಡನ್ ಕೈಯಾಗಿನ್ ಗೊಂಬೆಗಳು ಅವ್ನು ಕುಣಿಸಿದಾಂಗ ಕುಣಿತಾರ ಒಳ್ಳೇದು ಕೆಟ್ಟದ್ದು ಯಾವ್ದು ಯೋಚನೆ ಮಾಡೋಲ್ಲ ನಿಮ್ಮವ್ವನ್ ಬಹಿಷ್ಕಾರ ಮಾಡಿದ್ದು ಇದಾ ಗೌಡ ಇದಾ ಜನಾ ಇದಾ ಊರು ಸತ್ಯ ಏನು  ಅಂತ ಒಬ್ರು ಅವಳ ಬಾಯಾಗ ಕೇಳಿಲ್ಲ ನಿನಗೂ ಗೊತ್ತು 

ಗೊತ್ತು ಸತ್ಯಣ್ಣ ನೆನಸ್ಕೊಂಡ್ರೆ ಈಗ್ಲೂ ಅಳು ಬರುತ್ತೆ ನಾ ಚಿಕ್ಕವ ಏನ್ ಮಾಡೋದು ನಾ ನ್ಯಾಯ ಕೇಳಿದ್ರ ಯಾರ್ ಕೊಡ್ತಾರ ನನ್ನಕೈಯಾಗ ಏನ್ ಮಾಡೋಕ್ ಸಾದ್ಯ..? ಅತ್ತು ಅತ್ತು ಕಣ್ಣಿರು ಕೂಡ ಬತ್ತಿ ಹೊಗೈತಿ ಅವ್ವ ಇದಿದ್ರೆ ಕೈ ತುತ್ತು ಕೊಡ್ತಾ ಇದ್ಲು ಈಗ ಯಾರು ನನ್ನಾ ನೋಡ್ಕೊಳ್ತಾರ ನಾನು ಹಿಂಗ ಇನ್ನೊಂದು ನಾಕು ದಿನ ಉಪವಾಸ ಇದ್ದು ನಾನು ಸತ್ತು ಹೋಗ್ತೀನಿ... ದಚ್ಚು ಬಿಕ್ಕಿ ಬಿಕ್ಕಿ ಅಳುತ್ತಿದ್ದ, ಅಯ್ಯೋ ಹುಚ್ಚಾ.. ಹುಟ್ಟು ಸಾವು ಅನ್ನೋದು ನಮ್ಮ ಕೈಯಲ್ಲಿ ಇಲ್ಲಾ,  ಸತ್ತು ಎನ್ ಸಾದುಸ್ತಿಯಾ..?   ತಾಯಿ ಕಳಕೊಂಡ ಸಂಕಟ ನನಗೂ ಐತಿ,  ಈಗ ಎದ್ದು ಬಾ ಇಲ್ಲಿಂದ, ಬಾಯಿ ಬಿಟ್ರ ಬರೀ ದೊಡ್ಡ ದೊಡ್ಡ ಮಾತಗಳನ್ನ ಆಡ್ತಿಯ.

ಇದ್ದು ನಾನರ ಏನ್ ಸಾಧಿಸೋದು ಅದಾ..? ಈ ಕುಂಟನ ಕೈಯಲ್ಲಿ ಏನ್ ಆಕೈತಿ, ಎಲ್ಯರ ದುಡಿಯೋಣ ಅಂದ್ರ ಯಾರು ನನಗ ಕೆಲಸ ಕೊಡಲ್ಲ ಅವ್ವ ಇದ್ಲು ಹೇಗೋ ಒಂದು ಮರದ ಮಣಿಗೆ ನಾಲ್ಕು ಗಾಲಿ ಹಾಕಿ ಮಳಿ ಬಡದು ಕೂತು ತಳ್ಳು ಕೊಂಡು ಹೋಗೋ ಥರ ಮಾಡಿಕೊಟ್ಳು, ಅದುನು ಇಲ್ದೇ ಇದದ್ರೆ ನಾ ಕೂತಲ್ಲೇ ಕುರ್ಬೇಕಾಗಿತ್ತು, ಆದರೆ ನಮವ್ವು ಆಗಾಗ ಹೇಳ್ತಾ ಇದ್ಲು ಮಗ ನಿನಗೆ ಕಾಲು ಬರ್ತವೆ ಬರ್ತವೆ ಅಂತ ನನಗೂ ಅನಿಸ್ತೈತಿ ನನಗೆ ಕಾಲು ಇವತ್ತಲ್ಲ ನಾಳೆ ನಡೆಯೋಕೆ ಬರ್ತವೆ ಅಂತ ಆದ್ರೆ  ನಿನ್ನ ಆ ರಾಮಪ್ಪನ ಬಿಟ್ರ ನನಗ ಈಗ ಯಾರು ಇದರಾ ? ಊರಾಗ ಕದ್ದು ಮುಚ್ಚಿ ಹೇಗೋ ನಾಲ್ಕ ದಿನ ರಾಮಪ್ಪ ನನಗೆ ಊಟಕ್ಕ ತಂದು ಕೊಡ್ತಾ ಐದಾನ ಅವನಾದ್ರು ಎಷ್ಟು ದಿನ ಅಂತ ಕೊಡ್ತಾನ ಹೇಳು ನಾಳೆ ಆ ಗೌಡನಿಗೆ ಗೊತ್ತದ್ರಾ...? ಇದ್ದು ನಿಮಗೆಲ್ಲ ಭಾರ ಆಗೊಕ್ಕಿಂತ ಸಾಯೋದು ಮೇಲು ಈ ಮಾತುಗಳನ್ನು ಕೇಳುವಾಗ ಸತ್ಯಪ್ಪನ ಕಣ್ಣಲ್ಲಿ ನೀರು ತುಂಬಿ ಕೊಂಡಿದ್ದವು ಒಂದೈದು ನಿಮಿಷ ಮೌನದಲ್ಲೇ ಕೂತಿದ್ದ ಸತ್ಯಪ್ಪ,  ಅದು ಯಾವ ಮಾಯೆಯಲ್ಲಿ ಹೋಟೆಲ್ ನಿಂದ ತಿಂಡಿ ತಂದು ಪಕ್ಕದಲ್ಲೇ ನಿಂತಿದ್ದ ರಾಮಪ್ಪ ದಚ್ಚುವಿನ ಜೊತೆ ಮಾತಿಗಿಳಿದ "ಅವ ಏನ್ ಮಾಡ್ತಾನೋ ಏನ್ ಮಾಡಕ ಆಕಾತಿ ಊರ್ನವರು ಹೆದರುತ್ತಾರೆ ಅಂತ ನಾವು ಹೆದ್ರೋಲ್ಲ, ಸಾಯೋ ಮಾತು ಯಾಕ ಆಡ್ತಿಯ ನಾವು ಇರೋ ತನಕ ನಿನ್ನ ನಾವು ನೋಡಿಕೊಳ್ತಿವಿ ನಾವು ನಿನ್ನ ಹುಟ್ಟಿನಿಂದ ನೋಡಿದಿವಿ ಇದಾ ಕೈಯಾಗ ಎತ್ತಿ ಆಡಿಸಿದಿವಿ ಮೊದ್ಲು ನಿನ್ನ ಕಾಲು ಚನ್ನಾಗಿತ್ತು ನೀ ಓಡಾಡ್ತಾ ಇದ್ದಿ ಹೋಗ್ಲಿ ಬಿಡು ಇಗ್ಯಾಕ ಅದೆಲ್ಲ ತಗೋ ಇದನ್ನ ಮಕಗಿಕ ತೊಳ್ದುಕೊಂಡು ತಿನ್ನುವಂತೆ ಈಗ ಈ ಜಾಗ ಬಿಟ್ಟು ಎದ್ದಾ ಆಕಡೆ ಹೋಗೋಣ ಬಾ " ಎನ್ನುತ್ತಲೆ  ಸ್ಮಶಾಣದಿಂದ ದಚ್ಚುವನ್ನು ರಾಮಪ್ಪ ಸತ್ಯಪ್ಪ ಇಬ್ಬರು ಎತ್ತುಕೊಂಡು ರಸ್ತೆಯ ಬಳಿ ಹೋದರು...!  

ದಚ್ಚುವಿನ ಮನಸ್ಸಿನ ನೋವು ದುಃಖ ಯಾರಿಗೂ ಅರ್ಥವಾಗಿರಲಿಲ್ಲ ತನ್ನ ತಾಯಿಗೆ ಆದ ಬಹಿಷ್ಕಾರದಿಂದ ಊರಲ್ಲಿ ಯಾರು ಅವನನ್ನು ಸೇರುತ್ತಿರಲಿಲ್ಲ ಯಾರೊಬ್ಬರು ಇವನ ಸಾಹಯಕ್ಕೆ ಮುಂದೆ ಬಂದಿರಲಿಲ್ಲ, ಮಾತೃತ್ವ ತುಂಬಿದ ಕೆಲವು ಹೆಂಗಸರು ಮಾತ್ರ ದೂರದಲ್ಲೇ ನೋಡಿ ಅಯ್ಯೋ ಪಾಪ ಅಂದುಕೊಳ್ಳುತ್ತಿದ್ದರು ಏನಾದ್ರು ಕೈಲಾದ ಸಹಾಯ ಮಾಡಬೇಕೆನ್ನುವ ಮನಸ್ಸಾದರೂ ಊರಿನ ಧಣಿ ಆಜ್ಞೆ ನೆನಪಾಗಿ ಹಿಂದೇ ಸರಿಯುತ್ತಿದ್ದರು. ಆದರೆ ಸತ್ಯಪ್ಪ ಮತ್ತು ರಾಮಪ್ಪ ಮಾತ್ರ ದಚ್ಚು ವನ್ನು ಹಚ್ಚಿಕೊಂಡಿದ್ದರು ಅವರ ಸ್ವಭಾವವೇ ಅಂತಹದ್ದು 18 ಹರೆಯದ ದಚ್ಚು ನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಸತ್ಯಪ್ಪ  ದಚ್ಚುವಿನ ನೋವು ಏನೆಂಬುದನ್ನು ಕಂಡುಕೊಂಡಿದ್ದ ಏಕೆಂದರೆ ಅವನು ಕೂಡ ಒಬ್ಬ ಅನಾಥ,


                                     > > >                                                < < <    




ರಾಮಪ್ಪ ಮತ್ತು ಸತ್ಯಪ್ಪನ ಸ್ನೇಹ ಸುಮಾರು ವರ್ಷಗಳ ಹಿಂದಿನದು ಸತ್ಯಪ್ಪ 10 ವರ್ಷದವನಿದ್ದಾಗ ತಂದೆ ತಾಯಿಯೊಂದಿಗೆ ಜಾತ್ರೆಗೆ ಬಂದಿದ್ದ ಜಾತ್ರೆ ಮುಗಿಸಿಕೊಂಡು ಕುರುವತ್ತಿ ದಡದಿಂದ ಚಿಕ್ಕುರುವತ್ತಿಯ ದಡ ತಲುಪ ಬೇಕಿತ್ತು ದಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ತುಂಬಿ ಹರಿಯುವ ತುಂಗೆಯನ್ನು ದಾಟುವುದು ಅಷ್ಟು ಸುಲುಭದ ಮಾತಾಗಿರಲಿಲ್ಲ ಹೀಗಿರುವಾಗ ತೆಪ್ಪ (ದೋಣಿ) ನಡೆಸುವ ಸಂಗಾ ಬೇಡವೆಂದರೂ ಸತ್ಯನ ತಂದೆಯ ಒತ್ತಾಯದ ಮೇರೆಗೆ ತೆಪ್ಪವನ್ನು ನಡೆಸಲು ಒಪ್ಪಿಕೊಂಡ ತೆಪ್ಪ ಹೊರಡುವಾಗ ಇವರ ಜೊತೆ ಇನ್ನು ಹಲವರು ತೆಪ್ಪವನ್ನು ಹತ್ತಿ ಕೊಂಡರು ಒಂದೊಂದು ಮಳೆಯ ಹನಿಯು ಕಲ್ಲಿನ ಹೊಡೆತದಂತೆ ಮೈಮೇಲೆ ಬೀಳುತ್ತಿದ್ದವು ನದಿಯು ಅಷ್ಟೇ ರಭಸವಾಗಿ ಹರಿಯುತ್ತಿತು ತೆಪ್ಪದಲ್ಲಿ ತುಂಬಾ ಜನ ಕೂತಿದ್ದರಿಂದ ನದಿಯ ನೀರು ತೆಪ್ಪದ ಅಂಚನ್ನು ದಾಟಿ ಉಳಗೆ ಬರುತಿತ್ತು ಸ್ವಲ್ಪ ಸಮಯದ ನಂತರ ನದಿಯ ಮಧ್ಯದಲ್ಲಿ ಅವರು ಕುಳಿತಿದ್ದ ತೆಪ್ಪ (ದೋಣಿ) ನೀರಿನ ಅಲೆಯ ರಭಸಕ್ಕೆ ಸಿಕ್ಕು ತೆಪ್ಪದಲ್ಲಿದ್ದವರೆಲ್ಲ ಜಲಸಮಾಧಿ ಆದರು ತಪ್ಪವನ್ನು ನಡೆಸುತ್ತಿದ್ದ ಸಂಗಾ ಮುಳುಗುವಾಗ ಪಕ್ಕದಲ್ಲೇ ಕುಳಿತಿದ್ದ ಸತ್ಯನನ್ನು ಬದುಕಿಸಲು ಮುಂದಾದ ಸತ್ಯನ ಕೊರಳಲ್ಲಿ ಇದ್ದ ಶಿವಧಾರವನ್ನೇ ಗಟ್ಟಿಯಾಗಿ ಹಿಡಿದು ಎಳೆದುಕೊಂಡು ದಡಕ್ಕೆ ತಲುಪಿಸಿದ್ದ.... ಎಷ್ಟು ದಿನಗಳಾದರೂ ಸತ್ಯನ ಕಡೆಯ ಸಂಭಂದಿಕರು  ಇವನ್ನನ್ನಾಗಲಿ ಇವನ ತಂದೆ ತಾಯಿಯರನ್ನಾಗಲಿ ಹುಡುಕಿಕೊಂಡು ಬರಲಿಲ್ಲ..! ಇವನು ಕೂಡ ತನ್ನ ಊರಿಗೆ ಹೋಗುವ ಒಲವು ತೋರಲಿಲ್ಲ ಊರಿನ ಪಂಚಾಯ್ತಿಯಲ್ಲಿ ಅನಾಥನಾಗಿದ್ದ ಹುಡುಗನನ್ನ ಸಾಕುವವರ್ಯಾರು ಅಂತ ಹಬ್ಬಿದ ಪ್ರಶ್ನೆಗೆ ಉಳ್ಳವರೆಲ್ಲ ಹಿಂದೇ ಸರಿದರು ಸಂಗಾ ಮಾತ್ರ "ಬದುಕಿಸಿದ ತಪ್ಪಿಗೆ ನಾನೇ ಸಾಕ್ತೀನಿ" ಅಂತ ಪಂಚಾಯ್ತಿಯಲ್ಲಿ ಸತ್ಯನನ್ನ ಮನೆಗೆ ಕರೆದುಕೊಂಡು ಬಂದಿದ್ದಾ.

ಇಷ್ಟು ಚಿಕ್ಕ ವಯಸ್ಸಿನಲ್ಲಿ ತನಗೆ ಒದಗಿದೆ ಈ ಕಹಿ ಘಟನೆಯಿಂದ ಸತ್ಯ ಇನ್ನೂ ಹೊರಬಂದಿರಲಿಲ್ಲ, ಘಟನೆ ನಡೆದ  ಮೂರುದಿನಗಳ ನಂತರ  ನೀರಿನಲ್ಲಿ ಮುಳುಗಿ ಹೋಗಿದ್ದ ಶವಗಳು ನದಿ ತೀರದಲ್ಲಿ ಸಿಕ್ಕಾಗ ಸತ್ಯನ ಗೋಳು ಮುಗಿಲು ಮುಟ್ಟಿತ್ತು ತನ್ನ ಕೈಯಾರೆ ತಂದೆ ತಾಯಿಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಸತ್ಯ ಮಾನಸಿಕವಾಗಿ ವಿಚಲಿತನಾದ ತಂದೆ ತಾಯಿರ ನೆನಪು ಅವನನ್ನ ಕಾಡುತ್ತಿತ್ತು ತನ್ನ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲಾ ಪುರಾಣ ಕಥೆಗಳನ್ನು ತಾಯಿಯಿಂದ ಕೇಳಿ ತಿಳಿದುಕೊಂಡಿದ್ದ ಮೊದಲ ಭಾರಿಗೆ ತನ್ನ ಊರಲ್ಲಿ ನಡೆದ "ಸತ್ಯವಂತ ಸತ್ಯ ಹರಿಶ್ಚಂದ್ರ" ನಾಟಕವನ್ನು ನೋಡಿದ್ದ ಹರಿಶ್ಚಂದ್ರನ ಪಾತ್ರ ಅವನನ್ನ ಎಷ್ಟು ಸೆಳೆದಿತ್ತು ಅಂದರೆ ತನ್ನ ಹೆಸರನ್ನು ಯಾರಾದರು ಕೇಳಿದರೆ ಹರಿಶ್ಚಂದ್ರ ಅಂತ ಹೇಳಿಕೊಳ್ಳುತ್ತಿದ್ದ, ಅಲ್ಲದೆ ಪ್ರತಿ ದಿನ ತಪ್ಪದೆ ಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದ 


ಮುಂದಿನ ಸಂಚಿಕೆಯಲ್ಲಿ...........

ಮತ್ತ ಸಿಗೋಣ್ರಿ ಶರಣು ಶರಣು 
ಮರೀಚಿಕೆ . ಮಂಜು 
+919742495837 

Wednesday 7 September 2011

ರಾಮಪ್ಪ ಸತ್ಯಪ್ಪ ...!

ಭಾಗ 1  


(ದಚ್ಚುವಿನ ಈ ಮೊದಲ ಭಾಗವನ್ನ ಉತ್ತರಕರ್ನಾಟಕ ಭಾಷೆಯ ಶೈಲಿಯಲ್ಲಿ  ಬರೆದಿದ್ದೇನೆ ಅದೇ ದಾಟಿಯಲ್ಲಿ ಓದಿದರೆ ಒಳ್ಳೆ ಫೀಲ್ ಕೊಡುತ್ತೆ ಅನ್ನೋದು ನನ್ನ ಅಭಿಪ್ರಾಯ) 


  
    ಮOಜು ಕರಗುವ ಸಮಯ, ಹತ್ತಿ ಉರಿಯುತ್ತಿದ್ದ ಬೆಂಕಿ ಬೂದಿಯಾಗಿ ಹೋಗೆ ಆಡುತ್ತಿದೆ ದೂರದಲ್ಲೆಲ್ಲೋ ಒಂಟಿ ಶ್ವಾನದ ಕೂಗು, ಎತ್ತರದಲ್ಲಿ ಹಾರುತ್ತಿರುವ ನರಹದ್ದಿನ ನೆರಳು ನೆಲದ ಮೇಲೆ, ಅಲಲ್ಲಿ ಹೂತು ಹೋದ ಹೆಣಗಳನ್ನು ಬಗೆದು ತೆಗೆದು ಆಚೆ ಎಸೆದಂತೆ ಕಾಣುತ್ತಿರುವ ತಲೆ ಬುರುಡೆಗಳು, ಎಣಿಕೆ ಇಲ್ಲದಷ್ಟು  ಮನುಷ್ಯನ ಸಮಾಧಿಗಳು ಯಾರಾದರು ಊಹಿಸಬಲ್ಲರು ಅದೊಂದು ರುದ್ರ ನರ್ತನ ತುಂಬಿದ ರುದ್ರಭೂಮಿ, ಯಮಲೋಕದ ಯಮಧೂತರು, ಶಿವಲೋಕದ ಶಿವಧೂತರು ಕಾದು ಕುತಿರುವರೆಂದು ನಂಬಿರುವ ಪವಿತ್ರ ಸ್ಥಳ ಉರಾಚೆಗಿನ ಸ್ಮಶಾಣ.....! 



"ಲೇ..ಲೇ.. ಸತ್ಯಪ್ಪ ಬಾರೋ ಬೇಗ ಬಾರೋ ಬೇಗ" ಸ್ಮಶಾಣದ ಗೇಟಿನಾಚೆ ನಿಂತು ರಾಮಪ್ಪ ರುದ್ರಭೂಮಿ ಕಾವಲುಗಾರ ಸತ್ಯಪ್ಪನನ್ನು ಗಾಬರಿಯಿಂದ ಕರೆದ 

"ಏನ್ ರಾಮಪ್ಪ ಬೆಳಗ್ಗೆ ಬೆಳಗ್ಗೆ ನನ್ನ ಕರಿತ ಇದಿಯಾ ನೀರ್ ಕಡೆ ಬಂದಿದ್ಯ ಏನ್ ಸಮಾಚಾರ...?" ತಲೆಗೆ ಟವೆಲ್ ಕಟ್ಟುತ್ತ ಸಣ್ಣ ಗುಡಿಸಲಿನಿಂದ ಹೊರಬಂದ ಸತ್ಯಪ್ಪ ನುಡಿದ 

"ಅಯ್ಯೋ ಸಮಾಚಾರ ಇರಲಿ ಅಲ್ನೋಡೋ ಯಾವ್ದೋ ಹೆಣ ಗುಂಡಿಯಿಂದ ಹೊರಗ ಬಿದ್ದದಾ, ನೀರಕಡೆ ಹೋಗೋಣು ಅಂತ ಬಂದ್ನೋ ಅದನ್ನ ನೋಡಿ ಭಯಪಟ್ಟು ನೀರಕಡೆ ಹೋಗ್ಲಿಲ್ಲೋ ಸತ್ಯಪ್ಪ "

"ಒಹ್.. ಒಹ್.. ಹೌದಲ್ಲೋ ಆದ್ರೆ ನನಗೇನೋ ಅದು ಗುಂಡ್ಯಾಗಿನ ಹೆನ ಅಂತ ಅನಿಸ್ತಿಲ್ಲಪ್ಪ" ಸತ್ಯಪ್ಪ ಅತ್ತ ನೋಡುತ್ತಾ ಹೇಳಿದ

ಹಂಗಾರ ಯಾರಾದ್ರು ಕೊಲೆ ಮಾಡಿ ತಂದು ಇಲ್ಲಿ ಹಾಕ್ಯಾರ ಅಂತಿಯಾ..? ಅನುಮಾನವೆಂಬಂತ್ತೆ ರಾಮಪ್ಪ ಕೇಳಿದ

"ಆಯ್ಯೋ ಅಯ್ಯೋ ಬಿಡ್ತು ಅನ್ನೋ ನಾನು ಇರುವಾಗ ಅದ್ಯಾರು ಹಂಗ ಮಾಡ್ತಾರ ನೀನು ಹುಲ್ಲು ಕಡ್ಡಿನ ತಿಳಿದನ ದೊಡ್ದು ಗುಡ್ಡ ಮಾಡಬೇಡ"

ಇಲ್ಲೋ ಮಾರಾಯ ನನಗೆ ಯಾಕೋ ಹಂಗಾ ಅನಿಸಕತ್ತೈತಿ... ನೀನಾ ಏನಾದ್ರು...? ರಾಮಪ್ಪ ಇನ್ನೂ ಮಾತಾಡುತ್ತಿದ್ದ ಅಷ್ಟರಲ್ಲೇ ಸತ್ಯಪ್ಪ ಸಿಟ್ಟಿನಿಂದ "ಲೇ...ಲೇ.. ನಿನ್ನಾಪ್ನು ಏನ್ ಮಾತಾಡಕತ್ತಿಯೋ ಸುಮ್ನ ಇರು,,, ಬಾ ಹತ್ರ ಹೋಗಿ ನೋಡೋಣಂತ"

"ಅಯ್ಯೋ...ನನಗ್ಯಾಕ ಬೇಕು..? ನಾ ಚೊಲೋ ಇರೋದು ನಿನಗ ಇಷ್ಟಿಲ್ಲಂತ ಕಾಣ್ತತಿ ಅದ್ಕ ನನ್ನ ಕರಿಯಕತ್ತಿಯ ನನ್ನ ಹೆಂಡ್ತಿ ಮನೆಯಾಗ ಕಾಯ್ತಾ ಇರ್ತಾಳ ನೀರಕಡಿ ಹೋದ ನನ್ನ ಗಂಡಾ ಇನ್ನೂ ಬಂದಿಲ್ಲಂತ ನಾ ಹೋಗ್ತನಪ್ಪ"

ಲೇ..ಲೇ.. ಮಗನ ಒಳಗ ದಬ್ಬಹಾಕೊಂಡು ಮಂಕಡವ್ನ ಎಬ್ಬಿಸಿ ಕರೆದು ಗುಂಡ್ಯಾಗಿನ ಹೆಣ ಹೊರ ಬಿದೈತಿ ಅಂತ ಗುಲ್ಲು ಎಬ್ಬಿಸಿ ಈಗ ನೋಡೋಣ ಬಾ ಅಂದ್ರ ಹೆಂಡ್ತಿ ನೆಪ ಹೇಳಿ ಹೊಂಟಿಯಾ, ಈಗೇನ್ ಒಳ್ಳೆ ಮಾತಿಲಿ ಬರ್ತೀಯ ಇಲ್ಲಾ ಅದಾ ಗುಂಡ್ಯಾಗ ನಿನ್ನ ಹೂತು ಬಿಡ್ಲಾ...? ಸತ್ಯಪ್ಪ ರಾಮಪ್ಪನನ್ನು ಗಧರಿಸಿದ

ಹ್ಮಂ ಹ್ಮಂ ಹ್ಮಂ ಹೂತು ಹಾಕೋನ ನೀನು ಅದಾ ಕೆಲ್ಸ ಅಲ ನಿಂದು.. ಗುಂಡ್ಯಾಗಿನ್ ಹೆಣ ತಗ್ದು ಮ್ಯಾಲ್ ಹಾಕ್ತಿಯ ನಾ ಸುಮ್ನಾ ಇದ್ರ ಅದಾ ಗುಂಡ್ಯಾಗ ನನ್ನ ಹಾಕಿ ಮಣ್ಣು ಮುಚ್ಚುತ್ತಿಯಾ..! ಆದದ್ದ್ ಆಗ್ಲಿ ನಡಿ ನಾನು ಬರ್ತೀನಿ ಸುಮ್ನಾ ಮುಚ್ಚಿಕೊಂಡು ಮನೆಕಡೆ ಹೋಗೋದು ಬಿಟ್ಟು ತಪ್ಪು ಮಾಡ್ದೆ..! ರಾಮಪ್ಪ ಗೊಣಗುತ್ತಾ  ಸತ್ಯಪ್ಪನನ್ನು ಹಿಂಬಾಲಿಸಿದ 

ದೊಡ್ಡೋರು ಸುಮ್ನ ಹೇಳಿಲ್ಲ ಮಾಡಿದ್ದುಣ್ಣೋ ಮಾರಾಯ ಅಂತ ಬಾ..... ಬಾ....! ಅನ್ನುತ್ತಾ ಮುಂದೆ ನಡೆಯುತ್ತಿದ್ದ ಸತ್ಯಪ್ಪನನ್ನ ತಡೆದು "ಲೋ..ಲೋ...ಸತ್ಯಪ್ಪ ಆಕಸ್ಮಾತ್ ಆ ಹೆಣ ಎದ್ದು ಬಾಯಿ ಬಿಟ್ರಾ...? ನಾ ಅಲ್ಲೇ ಬಾಯಿಬಾಯಿ ಬಡ್ಕೊಂಡು ಸತ್ತು ಹೋಗ್ತಿನೋಯಪ್ಪ ನನ್ನ ಹೆಂಡ್ತಿಗೆ ಹೇಳ್ಕೋಳ್ಳಕಂತ ನಾನೊಬ್ನ ಗಂಡ ಇರೋದು ನಿನ್ನ ಕೈ ಮುಗಿತಿನೋ ಬಿಟ್ಟುಬಿಡೋ ನಾ ತಿರುಗಿ ನೋಡ್ದಂಗ ಹೋಗ್ತಿನೋ" ರಾಮಪ್ಪ ಹೆದರಿದವನಂತೆ ಕೇಳಿಕೊಂಡ.

"ಹೌದಲೇ ಮಗನ ಬೇರೆಯವರ ಹೆಂಡ್ತಿರಿಗೆಲ್ಲ  ನಾಲ್ಕ್ ನಾಲ್ಕು ಗಂಡದ್ರು ಇರ್ತರೆನು ಸುಮ್ನಾ ಬರಕತ್ತಿಯ ಬಾ ನಾ ನೋಡದೆ ಇರೋ ನಾಟ್ಕದ ಡೈಲಾಗೆಲ್ಲ ಹೊಡಿಬೇಡ ನನ್ನ ಹೆಂಡ್ತಿಗು ಹೇಳ್ಕೋಳ್ಳಕ ನಾನು ಒಬ್ನಾ ಗಂಡಾ ಅಂತ ಇರೋದು" ಸತ್ಯಪ್ಪನ ಈ ಮಾತು ರಾಮಪ್ಪನಿಗೆ ಹಾಸ್ಯ ಅನಿಸಲಿಲ್ಲ "ಹಂಗಾರ ಒಂದು ಕೆಲ್ಸ ಮಾಡೋಣ" ರಾಮಪ್ಪ ನಡುವೆ ಬಾಯಿ ಹಾಕಿದ "ಹ್ಮಂ ಹೇಳ್ ಏನ್ ಮಾಡೋಣ..? ಸತ್ಯಪ್ಪ ಕೇಳಿದ 

ನಾವು ಇಲ್ಲೇ ನಿಂತು ಒಂದು ಕಲ್ಲು ಬೀಸಿ ಹೋಗಿಯೋಣ ಆಕಸ್ಮಾತ್ ಅದು ಹೆಣ ಆಗಿತ್ತು ಅಂದ್ರ ಸುಮ್ನಾ ಮಲ್ಕಂಡು ಇರ್ತಾತಿ...ರಾಮಪ್ಪ ಇನ್ನು ಮಾತಾಡುತ್ತಿದ್ದ ಅಷ್ಟರಲ್ಲೇ "ಇಲ್ಲಪ್ಪ ಅದು ಹೆಣ ಆಗ್ದೆ ದೆವ್ವ ಆಗಿತ್ತು ಅಂದ್ರಾ...?"  ಸತ್ಯಪ್ಪ ನಡುವೆ ಮಾತು ಸೇರಿಸಿದ 

ಥೊ..ಥೊ.. ನಿನ್ನಾಪ್ನು ನಿನ್ ಬಾಯಾಗ ಮಣ್ಣು ಹಾಕ... ಅದು ದೆವ್ವನ ಆಗಿದ್ರ ಮೊದ್ಲು ನಿನ್ನಾ ಹಿಡ್ಕೋಳ್ಳೋದು  ಬಿಡು ಯಾಕಂದಿ ನೀನಾ ನನಗಿಂತ ಮುಂದಾ ಇರೋದು ರಾಮಪ್ಪ ಗತ್ತಿನಿಂದಲ್ಲೇ ಹೇಳಿದ 

"ಲೇ...ಲೇ... ಅಮಾಸಿಗೆ ಹುಟ್ಟಿದವ್ನ ನಾ ಹೆಣ ಕಾಯೋನೋ ನನ್ನ ಮೂಸಿ ಕೂಡ ನೋಡಲ್ಲ ಅದು, ಏನಿದ್ರು ನಿನ್ನ ಥರ ಜನಿವಾರ ಹಾಕೊಂಡವರ್ನ ಹಿಡ್ಕತೈತಿ ನೋಡು" ಸತ್ಯಪ್ಪನ ಮಾತು ಕೇಳಿದ ರಾಮಪ್ಪ ಮೈ ಮೇಲೆ ಹಾಕಿದ್ದ ಜನಿವಾರವನ್ನ ಬಿಚ್ಚಿ ದೂರಾ ಎಸೆದು "ಬೆಳ್ಳಗೆ ಬೆಳ್ಳಗೆ ಹೆಣ ಕಾಯೋನ ಸಹವಾಸ ಮಾಡಿ ಕೆಟ್ಟೆ ಅಂತ ಗೊಣಗುತ್ತಾ ಸತ್ಯಪ್ಪನನ್ನು ಹಿಂಬಾಲಿಸುತ್ತಾನೆ 

ಏನ್ಲೇ ರಾಮಪ್ಪ ಒಬ್ನಾ ಗೊಣಗಾಕತ್ತಿಯ..?

"ಲೋ.. ಸತ್ಯಪ್ಪ ಯಾಕೋ ಹೋಟ್ಯಾಗ ಗೋರ್...ಗೋರ್..ಗೋರ್... ಅಂತೈತೋ ಒಂದು ಐದು ನಿಮಿಷ್ಯ ನೀರ್ ಕಡೆ ಹೋಗಿ ಬರ್ತಿನೋ" OC (ನಾರ್ತ್ ಕರ್ನಾಟದಲ್ಲಿ ಪ್ರಚಲಿತ ಇರುವ ಒಂದು ಜೂಜಿನ ಆಟ ಒಸಿ ) ಆಡುವಾಗ ಪೋಲಿಸ್ ಕೈಗೆ ಸಿಕ್ಕು ತಪ್ಪಾಯ್ತು ಬಿಟ್ಟು ಬಿಡಿ ಅಂತ ಮನವಿ ಮಾಡಿಕೊಂಡಂತ್ತೆ  ರಾಮಪ್ಪ ಸತ್ಯಪ್ಪನನ್ನು ಕೇಳಿಕೊಂಡ

ಲೇ.. ಮಗನ ನೀ ನೀರ್ ಕಡೆ ಇಲ್ಲೆ ಹೋದ್ರು ಚಿಂತಿಲ್ಲ ಇವತ್ತು ನಿನ್ನ ಬಿಡೋಲ್ಲ ಉಸಿರು ಬಿಡದಂಗಾ ಬಾ..! ಸತ್ಯಪ್ಪ ನಿರ್ದಾಕ್ಷಿಣ್ಯವಾಗಿ ನುಡಿದ

ರಾಮಪ್ಪ ಏನನ್ನು ಮಾತನಾಡದೆ ಸುಮ್ಮನೆ ಸತ್ಯಪ್ಪನನ್ನು ಹಿಂಬಾಲಿಸಿದ...!

ಮುಂದುವರೆಯುತ್ತದೆ...........